ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಧಾರವಾಡ ಜಿಲ್ಲೆಯ ಬಿಜೆಪಿ ಮನೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿ ಬಿಟ್ಟು ಹೋದ ಮೇಲೆ ರಾಜಕೀಯ ಬೆಳವಣಿಗೆಗಳು ನಡೆದಿವೆ. ಜಗದೀಶ ಶೆಟ್ಟರ ಸಹೋದರ ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಧಾರವಾಡ ಗ್ರಾಮೀಣ ಶಾಸಕಿ ಸಿಮಾ ಮಸೂತಿ ಸೇರಿದಂತೆ ಅನೇಕರು ಪಕ್ಷದಲ್ಲಿ ಅಸಮಾಧಾನದ ವಿಚಾರವಾಗಿ ಮಾತನಾಡಿದ್ದಾರೆ. ಈ ಬೆಳವಣಿಗೆ ನಡೆದ ಬೆನ್ನಲೇ ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು, ಪಕ್ಷದಲ್ಲಿ ಇರುವವರು ಇರಿ, ಹೋಗುವವರು ಹೋಗಿ ಎಂದು ಹೇಳಿದ್ದಾರೆ ಎಂದು ಶೆಟ್ಟರ ಕಟ್ಟರ ಬೆಂಬಲಿಗ, ಹುಡಾದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಪ್ರಲ್ಲಾದ ಜೋಶಿಯವರ ಈ ಹೇಳಿಕೆಯಿಂದ ನನ್ನ ಹಳೆಯ ಪಕ್ಷದ ದೇವರಂತಹ ಬಿಜೆಪಿಯ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ದೇವರಂತಹ ಕಾರ್ಯಕರ್ತರಿಗೆ, ಪಧಾಧಿಕಾರಿಗಳಿಗೆ ಕಾಂಗ್ರೇಸ್ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ ಎಂದು ಕಲಬುರ್ಗಿ ತಿಳಿಸಿದ್ದು, ಬಿಜೆಪಿ ಅಂಗಳದಲ್ಲಿ ಕಲಬುರ್ಗಿ ಫೇಸ್ ಬುಕ್ ಪೋಸ್ಟ ಸಖತ್ ವೈರಲ್ ಆಗಿದೆ.