ಜೆಡಿಎಸ್ ತೊರೆದು ಕಾಂಗ್ರೇಸ್ ಸೇರಿ ನವಲಗುಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಶಾಸಕ ಎನ್ ಎಚ್ ಕೋನರೆಡ್ಡಿ ಮಂತ್ರಿಯಾಗ್ತಾರೆ ಅನ್ನೋ ಸುದ್ದಿ ಜೋರಾಗಿ ಹರದಾಡುತ್ತಿದೆ. ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಮಾತು ಕೇಳಿ ಬರುತ್ತಿದ್ದಂತೆ, ಕೋನರೆಡ್ಡಿಯವರು ಆಕ್ಟಿವ್ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಕೋನರೆಡ್ಡಿಯವರಿಗೆ ಮಂತ್ರಿ ಮಾಡುವದಾಗಿ ಅಭಯ ನೀಡಿದ್ದಾರೆ ಎನ್ನಲಾಗಿದೆ. ಮೊದಲು ನಿಗಮ ಮಂಡಳಿ ಅಧ್ಯಕ್ಷಗಿರಿ ಮೇಲೆ ಆಸಕ್ತಿ ಹೊಂದಿದ್ದ ಕೋನರೆಡ್ಡಿ, ಇದೀಗ ಆ ಆಸೆಯಿಂದ ಹಿಂದೆ ಸರಿದಿದ್ದಾರಂತೆ.
ಮತ್ತೊಂದೆಡೆ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರು ಸಹ ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಾರೆ. ಅಬ್ಬಯ್ಯರಿಗೆ ಮಂತ್ರಿ ಸ್ಥಾನ ಕೊಡದೆ ಹೋದರು ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವಂತೆ ಅವರ ಬೆಂಬಲಿಗರು ಒತ್ತಡ ಹೇರಿದ್ದಾರೆ. ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿರುವ ಅಬ್ಬಯ್ಯರಿಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷಗಿರಿ ಸಿಗುವದು ಖಾತ್ರಿಯಾಗಿದೆ ಎನ್ನಲಾಗಿದ್ದು, ಅಬ್ಬಯ್ಯರಿಗೆ ಅಧ್ಯಕ್ಷಗಿರಿ, ಕೋನರೆಡ್ಡಿಯವರಿಗೆ ಮಂತ್ರಿಗಿರಿ ಸಿಗಲಿದೆಯಂತೆ.
ಈಗಷ್ಟೆ ಕಾಂಗ್ರೇಸ್ಸಿಗೆ ಬಂದಿರುವ ಎನ್ ಎಚ್ ಕೋನರೆಡ್ಡಿ, ಹಳಬರಿಗಿಂತಲೂ, ಕಾಂಗ್ರೇಸ್ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿದ್ದರಾಮಯ್ಯನವರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎ ಐ ಸಿ ಸಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಜಿ ಪರಮೇಶ್ವರ ಅವರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.