ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಕಾಂಗ್ರೇಸ್ಸಿನ ಆಳಂದ ಶಾಸಕ ಬಿ ಆರ್ ಪಾಟೀಲ ಮತ್ತೆ ಮುನಿಸಿಕೊಂಡಿದ್ದಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಅಸಮಾಧಾನಗೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಗತಿಸಿವೆ. ನನ್ನ ಕ್ಷೇತ್ರದಲ್ಲಿ ಭೂ ಸೇನೆಗೆ ನೀಡಿರುವ ಕಾಮಗಾರಿ ಅಪೂರ್ಣಗೊಂಡಿದಲ್ಲದೆ, ಕಳಪೆಯಾಗಿದೆ, ಸದನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದರೆ, ನನ್ನ ಮೇಲೆಯೆ ಸಂಶಯ ಬರುವ ರೀತಿಯಲ್ಲಿ ಮಂತ್ರಿಗಳು ಉತ್ತರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಡಿಸೆಂಬರ್ 4 ರಿಂದ 15 ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಇಂತಹ ಆರೋಪ ಹೊತ್ತು ಹೇಗೆ ಕಲಾಪದಲ್ಲಿ ಭಾಗವಹಿಸಲಿ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಕೂಡಲೇ ಭೂ ಸೇನೆಯ ಕಳಪೆ ಕಾಮಗಾರಿಯ ಬಗ್ಗೆ ತನಿಖಾ ಸಮಿತಿ ನೇಮಕ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಪತ್ರ ಬರೆದ ಬೆನ್ನಲ್ಲೇ ಆಳಂದ ಶಾಸಕ ಬಿ ಆರ್ ಪಾಟೀಲ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.