ಅದೊಂದು, ಸಂತಸದ ಜೊತೆಗೆ ಕಳೆದು ಹೋದ ನೆನಪಿನ ಬುತ್ತಿಯನ್ನು ಸ್ಮರಣಿಸುವ ಕಾರ್ಯಕ್ರಮ. ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಮೊನ್ನೆ, ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು.
ಸತತ 15 ವರ್ಷಗಳಿಂದ ಹುಬ್ಬಳ್ಳಿ ಮತ್ತು ಅಲ್ಲಾಪುರ ಗ್ರಾಮದ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸು, ಓಡಾಟ ನಿಲ್ಲಿಸುತ್ತಿದ್ದರ ಹಿನ್ನೆಲೆಯಲ್ಲಿ ಅದಕ್ಕಿಂದು ಬೀಳ್ಕೊಡುಗೆ ನೀಡಲಾಯಿತು. ಸೇರಿದ ಜನ ಕಣ್ಣೀರಿನ ವಿದಾಯ ಹೇಳಿದರು. ಈ ಬಸ್ಸು ಈ ವರೆಗೆ 11 ಲಕ್ಷ 80 ಸಾವಿರ ಕಿಲೋಮೀಟರ್ ಓಡಿದೆ.
ಅಲ್ಲಾಪುರ ಗ್ರಾಮದಲ್ಲಿ ಸರ್ಕಾರಿ ಬಸ್ಸನ್ನು ಸ್ವಚ್ಛಗೊಳಿಸಿ, ಅದಕ್ಕೆ ಸಿಂಗಾರ ಮಾಡಿ, ಪೂಜೆ ಸಲ್ಲಿಸಲಾಯಿತು. 15 ವರ್ಷಗಳ ಕಾಲ, ಗ್ರಾಮಸ್ಥರನ್ನು ಹೊತ್ತು ಸಾಗಿಸಿದ್ದ, ಪ್ರೀತಿಯ ಬಸ್ಸಿಗೆ ಬಿಳ್ಕೋಡುವ ಸಮಾರಂಭದಲ್ಲಿ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದು ವಿಶೇಷವಾಗಿತ್ತು.