ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರದು ಕೊಬ್ಬಿದ ಕಾಡು ಹಂದಿಯ ವರ್ತನೆಯಾಗಿದೆ ಎಂದು ಅಣ್ಣಿಗೇರಿ ಜೆಡಿಎಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಸ ಅವರಿಗೆ ಪತ್ರ ಬರೆದಿರುವ ಜೆಡಿಎಸ್ ಘಟಕ, ಎಚ್ಡಿಕೆ ಯವರ ವಿರುದ್ಧ ಅತ್ಯಂತ ಕೆಳಮಟ್ಟದ ಪದ ಬಳಕೆ ಮಾಡಿರುವ ಚಂದ್ರಶೇಖರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಕೇಂದ್ರ ಸಚಿವರು ಜೆಡಿಎಸ್ ನಾಯಕರಾದಂತಹ ಎಚ್ ಡಿ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಜಾರ್ಜ್ ಬರ್ನಾಡ್ ಶಾ ಅವರ ಮಾತನ್ನು ಉಲ್ಲೇಖಿಸಿ, ಪರೋಕ್ಷವಾಗಿ ಹಂದಿಗೆ ಹೋಲಿಸಿದ್ದಾರೆ.
ಒಬ್ಬ ಐಪಿಎಸ್ ಅಧಿಕಾರಿಯಾಗಿ ಕೇಂದ್ರ ಸಚಿವರ ವಿರುದ್ಧವೇ ಈ ರೀತಿ ಮಾತನಾಡಬೇಕಾದರೆ ಇನ್ನು ಜನಸಾಮಾನ್ಯರ ಪಾಡೇನು? ಎಂದು ಜೆಡಿಎಸ್ ಪ್ರಶ್ನಿಸಿದೆ.
ಎಂ ಚಂದ್ರಶೇಖರ್ ವಿರುದ್ಧವೇ ಸಾಕಷ್ಟು ಆರೋಪಗಳಿವೆ. ಹೆಚ್ಚು ಕಡಿಮೆ ಇವರು ಅಪರಾಧಿ ಸ್ಥಾನದಲ್ಲಿದ್ದಾರೆ. ಸಂಬಂಧಿಸಿದ ಎಲ್ಲ ವಿವರಗಳನ್ನು ಕುಮಾರಸ್ವಾಮಿಯವರು ನೀಡಿದ್ದಾರೆ.
ತನ್ನ ಮೇಲಿರುವ ಆರೋಪಗಳಿಗೆ ಕಾನೂನಾತ್ಮಕ ಗೌರವಪೂರ್ಣ ಸ್ಪಷ್ಟನೆ ನೀಡುವುದು ಬಿಟ್ಟು ಕೊಬ್ಬಿದ ಕಾಡು ಹಂದಿಯ ರೀತಿಯಲ್ಲಿ ಕೇಂದ್ರ ಸಚಿವರ ವಿರುದ್ಧ ಅತ್ಯಂತ ಕೀಳುಮಟ್ಟದ ಭಾಷೆ ಬಳಸಿರುವದು ರಾಜ್ಯದ ಆಡಳಿತ ಎತ್ತ ಸಾಗುತ್ತಿದೆ ಅನ್ನೋದರ ಬಗ್ಗೆ ನಿದರ್ಶನವಾಗಿದೆ. ಚಂದ್ರಶೇಖರರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿರುವ ಜೆಡಿಎಸ್, ಅವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ವೀರೇಶ ಶಾನುಭೋಗರ ನೇತೃತ್ವದ ನಿಯೋಗ ಅಣ್ಣಿಗೇರಿ ತಹಸೀಲ್ದಾರಗೆ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಶಿವು ಕಲ್ಲೂರ, ಪ್ರಕಾಶ ಅಂಗಡಿ ಸೇರಿದಂತೆ ಮುಖಂದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.