ವಿಜಯಪೂರದ ಗಜಾನನ ಮಂಡಳಿಗಳಿಗೆ ಬಿಜೆಪಿಯ ಫೈರ್ ಬ್ರಾಂಡ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ದೇಣಿಗೆ ಘೋಷಣೆ ಮಾಡಿದ್ದಾರೆ. ಗಜಾನನ ಮಂಟಪಗಳಿಗೆ ವೀರ ಸಾವರ್ಕರ ಫೋಟೋ ಜೊತೆ 5 ಸಾವಿರ ರೂಪಾಯಿ ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ್ದಾರೆ. ದೇಣಿಗೆ ವಿಷಯವಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ಶಾಸಕರ ಕಚೇರಿಗೆ ಅಲೆದಾಡುವದು ಬೇಡ ಎಂದಿರುವ ಯತ್ನಾಳ, ನೀವಿದ್ದಲ್ಲಿಗೆ ಬಂದು ಸ್ವಾಮಿ ವಿವೇಕಾನಂದ ಸೇನೆಯವರು ದೇಣಿಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಅನುಮತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಡಿ ಎಂದು ಕರೆ ನೀಡಿರುವ ಶಾಸಕರು, ಅಧಿಕಾರಿಗಳು ಖುದ್ದು ತಮ್ಮ ಮಂಟಪಕ್ಕೆ ಬಂದು ಅನುಮತಿ ಕೊಡುತ್ತಾರೆ ಎಂದಿದ್ದಾರೆ. ಅಧಿಕಾರಿಗಳು ಕಿರುಕುಳ ಕೊಟ್ಟರೆ ನನ್ನ ಕಚೇರಿಯ ಗಮನಕ್ಕೆ ತರಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಹಬ್ಬ ಆಚರಣೆಗೆ ಯಾವದೇ ನಿರ್ಭಂದವಿರುವದಿಲ್ಲ ಇದಕ್ಕೆ ವಿಘ್ನೇಶ್ವರಾಯ ಸಾಕ್ಷಿ ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ. ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸುವ ಗಜಾನನ ಮಂಟಪಕ್ಕೆ “ಸನಾತನ ಹಿಂದೂ ವೇದಿಕೆ ” ಎಂದು ನಾಮಕರಣ ಮಾಡಲಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.