ಪಂಪನ ನಾಡು ಅಣ್ಣಿಗೇರಿಯಲ್ಲಿ ಇಂದು ರಾಜಕೀಯ ಜಂಗಿ ಕುಸ್ತಿ ನಡೆಯಲಿದೆ. ಜಿದ್ದಾ ಜಿದ್ದಿನ ಕಣವಾಗಿರುವ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ನವಲಗುಂದ ಪುರಸಭೆ ಕಾಂಗ್ರೇಸ್ ಕೈಯಲ್ಲಿ ಇದ್ದರು ಸಹ, ಆಂತರಿಕ ಭಿನ್ನಾಭಿಪ್ರಾಯ ಪಕ್ಷದ ಸದಸ್ಯರನ್ನು ಎರಡು ಹೋಳು ಮಾಡಿದೆ.
ನವಲಗುಂದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿ, ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಆಯ್ಕೆ ಮಾಡಲು ವಿಫಲರಾಗಿದ್ದು, ಮತ್ತೊಂದು ಗುಂಪು, ಬಾಬಾಜಾನ ಮುಲ್ಲಾ ನೇತೃತ್ವದಲ್ಲಿ ಸೆಡ್ಡು ಹೊಡೆಯುವಲ್ಲಿ ಯಶಸ್ವಿಯಾಗಿದೆ. ಮೆಹಬೂಬಿ ನವಲಗುಂದ ಬೆಂಬಲಕ್ಕೆ ನಿಂತಿರುವ ಬಾಬಾಜಾನ ಮುಲ್ಲಾ ನೇತೃತ್ವದ 14 ಜನ ರೆಸಾರ್ಟ್ ನಲ್ಲಿ ತಂಗುವ ಮೂಲಕ ಶಾಸಕ ಕೋನರೆಡ್ಡಿಯವರ ನಿದ್ದೆಗೆಡಿಸಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೇಸ್ ಹೆಣಗಾಡುತ್ತಿದ್ದರೆ, ಅಣ್ಣಿಗೇರಿ ಪುರಸಭೆಯಲ್ಲಿ ಕಾಂಗ್ರೇಸ್, ಬಿಜೆಪಿ ಭಾಯಿ ಭಾಯಿ ಆಗಿದ್ದಾರೆ. ಶಾಸಕ ಕೋನರೆಡ್ಡಿ ಕ್ಷೇತ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಕೂತುಹಲ ಮೂಡಿಸಿದೆ. ಬಿಜೆಪಿಯೊಂದಿಗೆ ಕಾಂಗ್ರೇಸ್ ನಾಯಕರು ರಾಜ್ಯದಲ್ಲಿ ದುಷ್ಮನಿ ಮಾಡಿದರೆ, ಅಣ್ಣಿಗೇರಿಯಲ್ಲಿ ದೋಸ್ತಿ ಮಾಡಿದ್ದಾರೆ. ಬಿಜೆಪಿ ಜೊತೆ ದೋಸ್ತಿ ಮಾಡಲು ಕೋನರೆಡ್ಡಿ ಕಾರಣರಾದರಾ ಅನ್ನೋ ಮಾತು ಕೇಳಿ ಬರುತ್ತಿದೆ.
23 ಸದಸ್ಯ ಬಲದ ಅಣ್ಣಿಗೇರಿ ಪುರಸಭೆಯಲ್ಲಿ 14 ಜನ ಸದಸ್ಯರು ಬಾಬಾಜಾನ ನೇತ್ರತ್ವದಲ್ಲಿ ಮೆಹಬೂಬಿ ಪರ ನಿಂತಿದ್ದಾರೆ. ಅದರಲ್ಲಿ ಕಾಂಗ್ರೇಸ್ಸಿನ 6, ಪಕ್ಷೇತರ 5, ಬಿಜೆಪಿಯ 4 ಜನ ಸದಸ್ಯರು ಮೆಹಬೂಬಿ ಪರ ಒಂದಾಗಿದ್ದಾರೆ. ಶಾಸಕ ಕೋನರೆಡ್ಡಿಯವರಿಗೂ ಮತ ಹಾಕುವ ಅವಕಾಶವಿದ್ದು, ಕೋನರೆಡ್ಡಿ, ಮತ ಚಲಾಯಿಸುತ್ತಾರೋ ಅಥವಾ ತಟಸ್ಥರಾಗ್ತಾರೋ ಕಾದು ನೋಡಬೇಕಾಗಿದೆ.