ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ, ಬೆನ್ನಿಗೆ ನಿಂತ ಪರಿಣಾಮ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬರಲು ಕಾರಣವಾಗಿದ್ದು ಗೊತ್ತಿರುವ ವಿಚಾರ. ಈ ಮಾತನ್ನು ಖುದ್ದು ಗೃಹ ಸಚಿವ ಜಿ ಪರಮೇಶ್ವರ ಮತ್ತು ಪರಿಷತ ಮಾಜಿ ಸದಸ್ಯ ಪ್ರಕಾಶ ರಾಠೋಡ ಬಹಿರಂಗವಾಗಿಯೇ ಹೇಳಿದ್ದಾರೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಹೆಸರಾದ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು ರಾಜ್ಯದ ಎರಡನೇ ರಾಜಕೀಯ ಶಕ್ತಿ ಕೇಂದ್ರಗಳಾಗಿವೆ.
ಸಧ್ಯ ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ನಾಯಕತ್ವ ಬೆಳೆಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸವಣೂರ, ಧಾರವಾಡದ ಅಂಜುಮನ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಪರಿಷತ ಸದಸ್ಯರಾಗಲು ಅರ್ಹರಾಗಿದ್ದು, ಈ ಮೂವರು ವೈಯುಕ್ತಿಕ ನೆಲೆಗಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಶಿಗ್ಗಾವ ಕ್ಷೇತ್ರದಿಂದ ಟಿಕೇಟ್ ಪಡೆದು ಕೊನೆ ಕ್ಷಣದಲ್ಲಿ ಬೇರೆಯವರಿಗೆ ಟಿಕೇಟ್ ಕೊಟ್ಟಿದ್ದರಿಂದ ಸುಮ್ಮನಾಗಿದ್ದ ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸವಣೂರ, ಪರಿಷತ ಸ್ಥಾನ ಕೊಡುವಂತೆ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ.
ಮತ್ತೊಂದೆಡೆ ಕಳೆದ 7 ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಅಲ್ತಾಫ್ ಹಳ್ಳೂರ, ನಿಗಮದ ಬದಲು ಪರಿಷತ್ ಸ್ಥಾನ ಕೊಡುವಂತೆ ಕೆ ಪಿ ಸಿ ಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹತ್ತಿರ ಆಗ್ರಹಿಸಿದ್ದಾರೆ. ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದು, ಈ ಸಲ ಕ್ಷೇತ್ರವನ್ನು ದೀಪಕ ಚಿಂಚೋರೆಯವರಿಗೆ ಬಿಟ್ಟು ಕೊಟ್ಟಿದ್ದರು. ಸಹಜವಾಗಿ ಇಸ್ಮಾಯಿಲ್ ತಮಟಗಾರ ಪರಿಷತ ಸ್ಥಾನ ಗಿಟ್ಟಿಸಲು ಲಾಭಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತಗೆ ನಡೆಯುವ ಚುನಾವಣೆಯಲ್ಲಿ ತೀವ್ರ ಪೈಪೋಟಿಯೂಡ್ಡಿದ್ದ ಇಸ್ಮಾಯಿಲ್ ತಮಟಗಾರರಿಗೆ ಕಡೆ ಕ್ಷಣದಲ್ಲಿ ಟಿಕೇಟ್ ಕೈ ತಪ್ಪಿತ್ತು. 2024 ರಲ್ಲಿ ವಿಧಾನ ಪರಿಷತ್ತಿನ ಕೆಲ ಸ್ಥಾನಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಮೂವರು ಮುಸ್ಲಿಂ ನಾಯಕರು ಪರಿಷತ್ ಗೆ ಪ್ರಯತ್ನ ನಡೆಸಿದ್ದಾರೆ.
ಉತ್ತರ ಕರ್ನಾಟಕ ಅದರಲ್ಲಿಯೂ ಪ್ರಮುಖವಾಗಿ ಧಾರವಾಡ ಜಿಲ್ಲೆಯ ಮೂವರ ಪೈಕಿ ಒಬ್ಬರಿಗೆ ಪರಿಷತ್ ಸ್ಥಾನ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೇಸ್ ಹೈಕಮಾಂಡ ಯಾರನ್ನು ಆಯ್ಕೆ ಮಾಡತ್ತೋ ಕಾಯ್ದು ನೋಡಬೇಕಿದೆ.